ಕಾರು ಅಪಘಾತದಿಂದ ವಿನೀಶ್ ಆಸ್ಪತ್ರೆ ಸೇರಿದ್ದಾರೆ ಎನ್ನುವುದು ಸುಳ್ಳು ಸುದ್ದಿ ಎಂದ ವಿನೀಶ್ ತಾಯಿ
ನಟ ದರ್ಶನ್ ಪುತ್ರ ವಿನೀಶ್ ಅವರಿದ್ದ ಐಷಾರಾಮಿ ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸವಾರನಿಗೆ ಸಣ್ಣಪುಟ್ಟ ಗಾಯವಾಗಿದೆ ಎನ್ನುವ ಸುದ್ದಿಗಳು, ಅಪಘಾತದ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಸದ್ಯ ಈ ಬಗ್ಗೆ ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರು ಸ್ಪಷ್ಟನೆಯ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದಾರೆ.
ರಾಜರಾಜೇಶ್ವರಿ ನಗರದ ರಸ್ತೆಯಲ್ಲಿ ಹೋಗುತ್ತಿದ್ದ ಫೋರ್ಡ್ ಎಂಡೀವರ್ ಕಾರು ದ್ವಿಚಕ್ರ ವಾಹನವೊಂದಕ್ಕೆ ಡಿಕ್ಕಿ ಹೊಡೆದಿದೆ. ಇದರಿಂದ ಕೆಳಕ್ಕೆ ಬಿದ್ದ ಬೈಕ್ ಸವಾರ ನೆಲಕ್ಕೆ ಬಿದ್ದ ಕಾರಣ, ಆತನಿಗೆ ಸಣ್ಣಪುಟ್ಟ ಗಾಯವಾಗಿದೆ ಎನ್ನಲಾಗಿತ್ತು. ಈ ಆರೋಪಗಳನ್ನು ತಳ್ಳಿ ಹಾಕಿ, ವಿನೀಶ್ ಕಾರನ್ನು ಚಲಾಯಿಸುತ್ತಿರಲಿಲ್ಲ. ವದಂತಿಗಳಿಗೆ ಕಿವಿಕೊಡಬೇಡಿ ಎಂದು ವಿಜಯಲಕ್ಷ್ಮಿ ಹೇಳಿದ್ದಾರೆ.
ವಿನೀಶ್ಗೆ ಅಪಘಾತವಾಗಿದೆ ಮತ್ತು ಆತ ಆಸ್ಪತ್ರೆಗೆ ದಾಖಲಾಗಿದ್ದಾನೆ ಎಂದು ಕೆಲವು ಸುದ್ದಿ ಹರಿದಾಡುತ್ತಿದೆ:
ಇದು ಸಂಪೂರ್ಣ ಸುಳ್ಳು. ವಿನೀಶ್ ಸುರಕ್ಷಿತವಾಗಿದ್ದಾನೆ. ಘಟನೆಯ ಸಮಯದಲ್ಲಿ ಆತ ವಾಹನವನ್ನು ಚಲಾಯಿಸುತ್ತಿರಲಿಲ್ಲ. ಎಂದಿನಂತೆ ನಮ್ಮ ಚಾಲಕನೇ ಗಾಡಿ ಓಡಿಸುತ್ತಿದ್ದರು. ಬೆಂಗಳೂರಿನ ಟ್ರಾಫಿಕ್ನಲ್ಲಿ ಸಾಮಾನ್ಯ ಎನ್ನಬಹುದಾದ ಒಂದು ಸಣ್ಣ ರಸ್ತೆ ಘಟನೆ ನಡೆದಿದೆ ಅಷ್ಟೇ.’
‘ದ್ವಿಚಕ್ರ ವಾಹನದಲ್ಲಿದ್ದವರೇ ತಮ್ಮ ತಪ್ಪು ಎಂದು ಒಪ್ಪಿಕೊಂಡು ಸ್ಥಳದಲ್ಲೇ ಕ್ಷಮೆಯಾಚಿಸಿದ್ದಾರೆ. ಬೈಕ್ನಲ್ಲಿದ್ದವರು ಸುರಕ್ಷಿತವಾಗಿದ್ದಾರೆಯೇ ಎಂದು ಪರಿಶೀಲಿಸಲು ವಿನೀಶ್ ಕೇವಲ ಕಾರಿನಿಂದ ಕೆಳಗಿಳಿದಿದ್ದನು. ದುರದೃಷ್ಟವಶಾತ್, ಆ ಕೆಲವೇ ಕ್ಷಣಗಳ ದೃಶ್ಯವನ್ನು ತಪ್ಪಾಗಿ ಅರ್ಥೈಸಿ, ದಾರಿ ತಪ್ಪಿಸುವ ರೀತಿಯಲ್ಲಿ ಪ್ರಸ್ತುತಪಡಿಸಲಾಗಿದೆ. ಈ ಘಟನೆಯಲ್ಲಿ ಯಾರಿಗೂ ಯಾವುದೇ ಗಾಯಗಳಾಗಿಲ್ಲ’ ಎಂದು ವಿಜಯಲಕ್ಷ್ಮಿ ದರ್ಶನ್ ಹೇಳಿದ್ದಾರೆ.
‘ಒಂದು ಕುಟುಂಬವಾಗಿ ನಾವು ಈಗಾಗಲೇ ಕಷ್ಟದ ಸಮಯವನ್ನು ಎದುರಿಸುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಸುಳ್ಳು ಸುದ್ದಿ ಹರಡುವುದು ನಮಗೆ ಇನ್ನಷ್ಟು ಆತಂಕವನ್ನು ಉಂಟು ಮಾಡುತ್ತದೆ. ಸಾರ್ವಜನಿಕರು ಇಂತಹ ಸುಳ್ಳು ವರದಿಗಳನ್ನು ನಂಬಬಾರದು ಮತ್ತು ಹಂಚಿಕೊಳ್ಳಬಾರದು’ ಎಂದು ವಿಜಯಲಕ್ಷ್ಮಿ ದರ್ಶನ್ ಮನವಿ ಮಾಡಿಕೊಂಡಿದ್ದಾರೆ.